ಭಾನುವಾರ, ಅಕ್ಟೋಬರ್ 19, 2008

ಸುಸ್ವಾಸ ಮತ್ತು ಟೆಲಿಫೋನ್ - 2

ಹಿನ್ನೆಲೆ: ಸುಸ್ವಾಸ ಒಬ್ಬ ಆಲಸಿ ಆದರೆ ತುಂಬಾ ವಿವೇಚನೆಯುಳ್ಳ ಮನುಷ್ಯ. ಅವನು ಮಧ್ಯಾಹ್ನ ಕಂಡ ಕನಸಿನಲ್ಲಿ ಮಂಜಿನ ಮನುಷ್ಯನು ಹಳೇ ಮಾದರಿಯ ಕಪ್ಪು ಟೆಲಿಫೋನನ್ನು ತೋರಿಸಿ ಸುಸ್ವಾಸನನ್ನು ಕುರಿತು "ಇದನ್ನು ನಿನ್ನ ಮನೆಯ ಲಿವಿಂಗ್ ರೂಮಿನ ಈಶಾನ್ಯ ದಿಕ್ಕಿನಲ್ಲಿ ಇರಿಸಿದರೆ, ಸಕಲ ಸಂಪತ್ತು, ಮರ್ಯಾದೆಗಳು ನಿನ್ನ ನೆರಳಿನಂತೆ ನಿನ್ನನ್ನು ಯಾವಾಗಲೂ ಹಿಂಬಾಲಿಸುತ್ತವೆ" ಎಂದು ಹೇಳಿತು. ಅದರಂತೆ ಅವನಿಗೆ ಕಪ್ಪು ಟೆಲಿಫೋನ್ ಕೂಡ ದೊರೆಯಿತು. ಆ ಟೆಲಿಫೋನು, ಮನೆಗೆ ಕರೆದೊಯ್ದು ಸ್ಥಾಪಿಸುವವರೆಗೂ ಮಾತನಾಡಬಾರೆದೆಂಬ ನಿಬಂಧನೆಯನ್ನು ವಿಧಿಸಿತು. ಆದರೆ ಉಪಾಯದಿಂದ ಸುಸ್ವಾಸನು ಮಾತನಾಡುವಂತೆ ಮಾಡಿ ಟೆಲಿಫೋನ್ ಮಾಯವಾಗಿ ಹೋಯಿತು. ಇನ್ನು ಮಾರನೇ ದಿನದ ಸೂರ್ಯೋದಯದ ನಂತರವೇ ಅದನ್ನು ಪಡೆಯಲು ಸಾಧ್ಯ.
ಮ್ಯಾಜಿಕ್ ಕ್ಯಾಶ್ ಕಾರ್ಡ್

ಕನಸಿನ ಪ್ರಕಾರವೇ ಟೆಲಿಪುರಮ್ಮಿನಲ್ಲಿ ಸಿಕ್ಕ ಟೆಲಿಫೋನ್ ಸುಸ್ವಾಸನ ನಂಬಿಕೆಯನ್ನು ಇಮ್ಮಡಿಗೊಳಿಸಿತು. ಮತ್ತು ಅದನ್ನು ಮನೆಯ ಈಶಾನ್ಯ ದಿಕ್ಕಿನಲ್ಲಿ ಸ್ಥಾಪಿಸುವದರಿಂದ ಸಕಲ ಸಂಪತ್ತು, ಮರ್ಯಾದೆಗಳು ದೊರೆಯುವ ಬಗ್ಗೆ ವಿಶ್ವಾಸವುಂಟಾಯಿತು. ಹೀಗಾಗಿ ಆ ಟೆಲಿಫೋನನ್ನು ಹೇಗಾದರೂ ಮನೆಗೆ ತರಲೇಬೇಕೆಂಬ ದೃಡ ನಿರ್ಧಾರದೊಂದಿಗೆ ಮಾರನೇ ದಿನ ಬೆಳಗ್ಗೆ ಟೆಲಿಪುರಮ್ಮಿಗೆ ಹೊರಟನು.

ಸುಸ್ವಾಸನಿಗೆ ಹುಡುಕಾಟದ ಪ್ರಮೇಯವೇ ಇರಲಿಲ್ಲ. ಮೊದಲ ಬಾರಿಗೆ ಯಾವ ಜಾಗದಲ್ಲಿ ಟೆಲಿಫೋನನ್ನು ಕಂಡಿದ್ದನೋ, ಈಗಲೂ ಅದು ಅಲ್ಲೇ ಕಾಣಿಸಿಕೊಂಡಿತು.

ಸುಸ್ವಾಸನು ಟೆಲಿಫೋನನ್ನು ಕಾರಿನಲ್ಲಿಟ್ಟುಕೊಂಡು ಮನೆ ಕಡೆ ಹೊರಟನು. ಆಗ ಫೋನಿನಿಂದ ಹೊರಟ ಜೋರಾದ ಟ್ರಿಣ್, ಟ್ರಿಣ್ ಸದ್ದು ಕೇಳಿ ರಿಸೀವರನ್ನು ಎತ್ತಿಕೊಂಡ. ಆಗ ಗಡಸಾದ ಧ್ವನಿಯು "ಸುಸ್ವಾಸ ನನ್ನನ್ನು ಪುನಃ ಹುಡುಕಿತಂದುದಕ್ಕಾಗಿ ಧನ್ಯವಾದಗಳು. ಈ ಬಾರಿ ನಿನ್ನ ಮನೆಯಲ್ಲಿ ಸ್ಥಾಪಿಸುವಲ್ಲಿ ಯಶಸ್ವಿಯಾಗುವೆ ಎಂದು ಆಶಿಸುತ್ತೇನೆ. ಆದರೆ ನನ್ನ ಕಟ್ಟಳೆಯನ್ನು ಮಾತ್ರ ಪಾಲಿಸಲೇಬೇಕು. ನಿನ್ನ ಮೊಬೈಲಿನಿಂದ 464 ಕ್ಕೆ 'ನೇಚರ್' ಎಂದು ಎಸ್ ಎಂ ಎಸ್ ಕಳುಹಿಸಬೇಕು. ಆಗ ನೋಂದಣಿಯನ್ನು ಖಾತ್ರಿಪಡಿಸಲು ನಿನಗೊಂದು ಮೆಸೇಜ್ ಬರುತ್ತದೆ. ಅದರಲ್ಲಿ ನಾಲ್ಕು ಆಯ್ಕೆಗಳಿರುತ್ತವೆ. 1,2,3 ಅಥವಾ ಸಂಖ್ಯೆ 4 ರ ಬಟನ್ ಒತ್ತುವ ಮೂಲಕ ನಿನ್ನ ಆಯ್ಕೆಯನ್ನು ಸೂಚಿಸಬೇಕು. ಆದರೆ ಕಟ್ಟಳೆ ಪ್ರಕಾರ ನೀನು ಕೇವಲ ಸಂಖ್ಯೆ 4 ನ್ನೇ ಒತ್ತಬೇಕು ಮತ್ತು ಮನೆಯನ್ನು ತಲಪುವವರೆಗೂ ಮಾತನಾಡಕೂಡದು" ಎಂದು ಹೇಳಿ ಪುನಃ ಮುಂದುವರೆಯುತ್ತಾ "ಸುಸ್ವಾಸ ಕಟ್ಟಳೆ ಮುರಿದರೆ ನಾನು ಮಾಯವಾಗಿ ಹೋಗುವುದು ನಿನಗೀಗ ಖಚಿತವಾಗಿರುವುದರಿಂದ ಹುಷಾರು!" ಎಂದು ಎಚ್ಚರಿಕೆ ನೀಡಿತು.

ಕೂಡಲೇ ಸುಸ್ವಾಸನು 464 ಕ್ಕೆ 'ನೇಚರ್' ಎಂದು ಎಸ್ ಎಮ್ ಎಸ್ ಮಾಡಿದ. ಮರುಕ್ಷಣವೇ ಅವನ ಮೊಬೈಲಿನ ಬೀಪ್ ಬೀಪ್ ಸದ್ದು ಮೆಸೇಜ್ ಬಂದಿರುವುದನ್ನು ಸೂಚಿಸಿತು. "ನಮ್ಮಲ್ಲಿ ನೋಂದಾಯಿಸಿಕೊಂಡದ್ದಕ್ಕಾಗಿ ವಂದನೆಗಳು. ಡೇಟಿಂಗ್ ಸೇವೆಗೆ ಸಂಖ್ಯೆ 1 ನ್ನು, ಭವಿಷ್ಯವನ್ನು ಕೇಳಲು ಸಂಖ್ಯೆ 2 ನ್ನು, ಆರೋಗ್ಯದ ಸಲಹೆಗಳಿಗಾಗಿ ಸಂಖ್ಯೆ 3 ನ್ನು ಮತ್ತು ಕಥೆ ಕೇಳಲು ಸಂಖ್ಯೆ 4 ನ್ನು ಒತ್ತಿರಿ" ಎಂದು ಬಂದಿದ್ದ ಮೆಸೇಜನ್ನು ಓದಿದ ಸುಸ್ವಾಸನು ಯಾವುದೇ ವಿಚಾರಕ್ಕೂ ಆಸ್ಪದ ಕೊಡದೆ ಸಂಖ್ಯೆ 4 ನ್ನು ಒತ್ತಿದ. ಆಗ ಗಡಸಾದ ಧ್ವನಿಯು "ಸುಸ್ವಾಸ ನೀನು ಒಳ್ಳೆಯ ಕೆಲಸವನ್ನೇ ಮಾಡಿರುವೆ, ಈಗ ನಿನ್ನ ಬ್ಲೂ ಟೂತ್ ಇಯರ್ ಫೋನನ್ನು ಕಿವಿಗೆ ಸಿಗಿಸಿಕೊಂಡು ಕಥೆಯನ್ನು ಕೇಳುತ್ತಾ ಪ್ರಯಾಣವನ್ನು ಮುಂದುವರೆಸು" ಎಂದು ಹೇಳಿತು.

ಸುಸ್ವಾಸನು ಕಥೆಯನ್ನು ಕೇಳತೊಡಗಿದ.

ಭಾರತೀಯ ಮೂಲದ ಬಹು ರಾಷ್ಟೀಯ ಸಂಸ್ಥೆ - ಬಾಬಾ. ಬಾಬಾ ಸಮುದಾಯದ ಕಂಪನಿಗಳು ಹಣಕಾಸು, ತೈಲ, ಖಾದ್ಯ ವಸ್ತುಗಳು, ತಂತ್ರಜ್ಞಾನ ಹೀಗೆ ಹೆಚ್ಚು ಕಮ್ಮಿ ಎಲ್ಲಾ ಕ್ಷೇತ್ರಗಳಲ್ಲೂ ಕೋಟ್ಯಾಂತರ ರೂಪಾಯಿಗಳ ವಹಿವಾಟು ನಡೆಸುತ್ತಿದ್ದವು. ಬಾಬಾ ಕಂಪನಿಯ ಅಧ್ಯಕ್ಷರು, ನೈತಿಕತೆಯ ಚೌಕಟ್ಟನ್ನು ಮೀರದಂತಹ ನಡವಳಿಕೆ ಹಾಗು ಜನಪರ ನೀತಿಗಳ ಅನುಸರಣೆಯಿಂದಾಗಿ ಜಗತ್ತಿನ ಗೌರವಾನ್ವಿತ ವ್ಯಕ್ತಿಗಳ ಸಮೂಹದಲ್ಲಿ ಅತಿ ವಿಶಿಷ್ಟರೆನಿಸಿದ್ದರು. ಆದರೂ ಬಾಬಾ ಕಂಪನಿಯ ಅಧ್ಯಕ್ಷರು ಚಿಂತಾಕ್ರಾಂತರಾಗಿದ್ದರು. ವೇಗವಾಗಿ ಬೆಳೆಯುತ್ತಿದ್ದ ಬಾಬಾ ಸಮುದಾಯದ ಕಂಪನಿಗಳನ್ನು ಸಮರ್ಪಕವಾಗಿ ನಿರ್ವಹಿಸಿ ಮುನ್ನಡೆಸುವಂತಹ ಸಮರ್ಥ ನಾಯಕರನ್ನು ತಯಾರು ಮಾಡಬೇಕಾಗಿತ್ತು. ಇದು ಮುಂಬರುವ ಹತ್ತು ವರ್ಷಗಳಲ್ಲೇ ಆಗಬೇಕಾದುದು, ಅಧ್ಯಕ್ಷರ ಚಿಂತೆಗೆ ಕಾರಣವಾಗಿತ್ತು. ಅದಲ್ಲದೆ ಇತ್ತೀಚಿನ ಜಾಗತಿಕ ವಿದ್ಯಮಾನಗಳು, ಕೇವಲ ಪ್ರತಿಷ್ಠಿತ ಬ್ಯುಸಿನೆಸ್ ಸ್ಕೂಲ್ ಕ್ಯಾಂಪಸ್ಸಿನಿಂದ ಬರುವ ಅಭ್ಯರ್ಥಿಗಳು ಮಾತ್ರ ಉತ್ತಮ ನಾಯಕರಾಗುತ್ತಾರೆ ಎಂಬುದನ್ನು ಹುಸಿಯಾಗಿಸಿತ್ತು. ಇಂತಹ ನೂರಾರು ಅಭ್ಯರ್ಥಿಗಳ ದಂಡನ್ನೇ ಹೊಂದಿದ್ದ ಹಣಕಾಸು ಕ್ಷೇತ್ರದ ಘಟಾನುಘಟಿ ಕಂಪನಿಗಳು ರಾತ್ರೋರಾತ್ರಿ ಮುಳುಗುತ್ತಿರುವುದು ದಿನನಿತ್ಯದ ಸಮಾಚಾರವಾಗಿದೆ. ಆದ್ದರಿಂದ ಬಾಬಾ ಕಂಪನಿಯ ಅಧ್ಯಕ್ಷರು, ಪ್ರಾರಂಭಿಕ ಹಂತದ ಉದ್ಯೋಗಿಗಳ ಆಯ್ಕೆ ವಿಧಿಯಲ್ಲಿಯೇ ಉತ್ತಮ ನಾಯಕರಾಗಬಲ್ಲವರನ್ನು ಗುರುತಿಸಲು ಯೋಚಿಸಿದರು. ಈ ವಿಷಯವನ್ನು ತಮ್ಮ ಮಾನವ ಸಂಪನ್ಮೂಲಗಳ ನಿರ್ದೇಶಕರಿಗೆ ತಿಳಿಸಿದಾಗ, ಈ ನಿಟ್ಟಿನಲ್ಲಿ ಅವರಾಗಲೇ ಹೊಸ ಯೋಜನೆಯೊಂದಿಗೆ ಸಿದ್ಧರಿದ್ದರು.

ಮೊದಲ ಹಂತದ ಲಿಖಿತ ಪರೀಕ್ಷೆಯಲ್ಲಿ ಪಾಸಾದ ಇನ್ನೂರೈವತ್ತು ಅಭ್ಯರ್ಥಿಗಳನ್ನು ಹೊಸ ಯೋಜನೆಯಡಿಯಲ್ಲಿ ರೂಪಿತವಾದ ಆಯ್ಕೆ ವಿಧಾನಕ್ಕೆ ಆರಿಸಲಾಯಿತು. ಅವರೆಲ್ಲರಿಗೂ ಕಂಪನಿಯ ತರಬೇತಿ ಕೇಂದ್ರದಲ್ಲಿ ಭಾನುವಾರ ಬೆಳಗ್ಗೆ ಹಾಜರಾಗಬೇಕೆಂದೂ, ಮತ್ತು ಅಲ್ಲೇ ಐದು ದಿನಗಳವರೆಗೆ ಇರಬೇಕಾಗುತ್ತದೆಂದು ಪತ್ರ ಮುಖೇನ ತಿಳಿಸಲಾಯಿತು.

ಬಾಬಾ ಕಂಪನಿಯ ತರಬೇತಿ ಕೇಂದ್ರವು ಪ್ರಪಂಚದ ಮುಂಚೂಣಿಯಲ್ಲಿರುವ ಅತ್ಯಂತ ಸುಸಜ್ಜಿತ ಹಾಗು ವ್ಯವಸ್ಥಿತ ತರಬೇತಿ ಕೇಂದ್ರಗಳಲ್ಲೊಂದಾಗಿತ್ತು. ಈ ಕೇಂದ್ರದ ವಿಶಾಲವಾದ ಸಭಾಂಗಣದಲ್ಲಿ ನೆರೆದಿದ್ದ ಅಭ್ಯರ್ಥಿಗಳನ್ನು ಉದ್ದೇಶಿಸಿ ಅಧ್ಯಕ್ಷರು ಸಾಂಪ್ರದಾಯಿಕ ಪರಿಚಯ ಭಾಷಣ ಮಾಡಿದರು. ಮುಂದಿನ ಐದು ದಿನಗಳವರೆಗೆ ನಡೆಯುವ ಆಯ್ಕೆ ವಿಧಾನದ ಉದ್ದೇಶ ಕೇವಲ ಉದ್ಯೋಗಿಗಳ ನೇಮಕಾತಿ ಮಾಡುವುದಲ್ಲ. ಆದರೆ ಮುಂಬರುವ ಹತ್ತು ವರ್ಷಗಳಲ್ಲಿ ಕಂಪನಿಯ ವಿವಿಧ ವಿಭಾಗಗಳನ್ನು ವ್ಯವಸ್ಥಿತವಾಗಿ ಮುನ್ನಡೆಸುವ ಹಾಗು ಅಭಿವೃದ್ದಿ ಕಡೆ ನಡೆಸುವ ಸಮರ್ಥ ನಾಯಕರುಗಳನ್ನು ಗುರುತಿಸುವ ವ್ಯವಸ್ಥೆ ಎಂಬುದನ್ನು ಮನದಟ್ಟು ಮಾಡಿದರು. ನಂತರ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಯೊಬ್ಬರು ಆಯ್ಕೆ ಪ್ರಕ್ರಿಯೆಯ ಬಗ್ಗೆ ವಿವರ ನೀಡತೊಡಗಿದರು.

ಪ್ರತಿ ಅಭ್ಯರ್ಥಿಗೂ ಒಂದು ಕ್ಯಾಶ್ ಕಾರ್ಡನ್ನು ನೀಡಲಾಗುವುದು. ಅದರ ಸಹಾಯದಿಂದ ತರಬೇತಿ ಕೇಂದ್ರದ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ಕ್ಯಾಶ್ ಕಾರ್ಡ್ ಸ್ವೈಪ್ ಮಾಡಿ ವಿವಿಧ ರೆಸ್ಟೊರೆಂಟಿನಲ್ಲಿ ಸಿಗುವ ಆಹಾರ ಪಾನೀಯಗಳು, ಶಾಪಿಂಗ್ ಮಾಲ್ ಗಳ ಮಳಿಗೆಗಳಲ್ಲಿ ಮಾರಲ್ಪಡುವ ವಸ್ತುಗಳು, ಸಿನೆಮಾ ಪ್ರದರ್ಶನಗಳು, ಪುಸ್ತಕ ಮಳಿಗೆಗಳು, ಲಾಂಡ್ರಿ ಸೇವೆ, ಬ್ಯೂಟಿ ಪಾರ್ಲರ್ ಗಳ ಸೇವೆಯನ್ನು ಬಳಸಿಕೊಳ್ಳಬಹುದು. ಮತ್ತು ಕಂಪ್ಯೂಟರ್ ಸೆಂಟರಿನ ಗೇಮಿಂಗ್ ಸ್ಟೇಶನ್ ನಿಮಗಾಗಿಯೇ ವಿಶೇಷವಾಗಿ ರೂಪಿಸಲ್ಪಟ್ಟಿದೆ. ಈ ಕಂಪ್ಯೂಟರಿನ ಇಂಟರ್ ಆಕ್ಟಿವ್ ಗೇಮ್ಸ್ ಗಳು ನಿಮಗೆ ಬಾಬಾ ಸಮುದಾಯದ ಕಂಪೆನಿಗಳ ಗುರಿಗಳು, ಅವಕಾಶಗಳು, ಅಡೆತಡೆಗಳು, ಮತ್ತು ಕಂಪನಿಯ ಕಾರ್ಯವಿಧಾನಗಳ ಬಗ್ಗೆ ಅರಿಯಲು ಸಹಾಯ ಮಾಡುತ್ತವೆ. ಈ ಕಂಪ್ಯೂಟರುಗಳನ್ನು ಕೂಡ ಕ್ಯಾಶ್ ಕಾರ್ಡನ್ನು ಸ್ವೈಪ್ ಮಾಡುವ ಮೂಲಕ ಬಳಸಿಕೊಳ್ಳಬಹುದು. ತರಬೇತಿ ಕೇಂದ್ರದಲ್ಲಿರುವ ಜಿಮ್, ವಿವಿಧ ಕ್ರೀಡಾವಳಿಗಳು ಹಾಗು ಈಜು ಕೊಳವನ್ನು ಕೂಡ ಧಾರಾಳವಾಗಿ ಉಪಯೋಗಿಸಿಕೊಳ್ಳಬಹುದು. ಈಗ ನೀವು ಅತಿ ಅವಶ್ಯವಾಗಿ ಗಮನದಲ್ಲಿಡಬೇಕಾದ ಸಂಗತಿ - ನಿಮ್ಮ ಕ್ಯಾಶ್ ಕಾರ್ಡನ್ನು ಜೋಪಾನವಾಗಿಟ್ಟುಕೊಳ್ಳಬೇಕು. ಏಕೆಂದರೆ ಅದಿಲ್ಲದೆ ನೀವು ಯಾವ ಸೌಲಭ್ಯಗಳನ್ನೂ ಬಳಸಿಕೊಳ್ಳಲಾರಿರಿ. ಪ್ರತಿದಿನ ಕ್ಯಾಶ್ ಕಾರ್ಡಿನಲ್ಲಿ 2,400.00 ರೂಪಾಯಿಗಳು ಜಮೆಯಾಗುತ್ತದೆ. ಮತ್ತು ಪ್ರತಿ ಬಾರಿ ಯಾವುದೇ ಸೌಲಭ್ಯಗಳನ್ನು ಬಳಸಿಕೊಂಡಾಗ ಅದಕ್ಕೆ ನಿಗದಿಪಡಿಸಿರುವ ಮೊತ್ತವನ್ನು ಕ್ಯಾಶ್ ಕಾರ್ಡಿನಿಂದ ವಜಾ ಮಾಡಲ್ಪಡುತ್ತದೆ. ಈ ಕ್ಯಾಶ್ ಕಾರ್ಡಿನ ವಿಶೇಷವೇನೆಂದರೆ, ದಿನಕ್ಕೆ ಕೇವಲ 2,400.00 ರೂಪಾಯಿಗಳ ಮೌಲ್ಯದ ಸೌಲಭ್ಯಗಳನ್ನು ಮಾತ್ರ ಬಳಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ದಿನದ ಕೊನೆಯಲ್ಲಿ ಕ್ಯಾಶ್ ಕಾರ್ಡಿನಲ್ಲಿ ಉಳಿಯುವ ಯಾವುದೇ ಮೊತ್ತವನ್ನು ಅನೂರ್ಜಿತಗೊಳಿಸಲಾಗುವುದು. ಆದ್ದರಿಂದ ಆ ಮೊತ್ತವನ್ನು ಮರುದಿನ ಬಳಸಿಕೊಳ್ಳಲು ಬರುವುದಿಲ್ಲ. ಹೀಗಾಗಿ ಪ್ರತಿದಿನ ಗರಿಷ್ಠ 2400.00 ರೂಪಾಯಿಗಳಷ್ಟು ಮೌಲ್ಯದ ಸೌಲಭ್ಯಗಳನ್ನು ಮಾತ್ರ ಬಳಸಿಕೊಳ್ಳಲು ಆಗುತ್ತದೆ. ಈ ನಿಯಮಾವಳಿಗಳು ನಾಳೆ ಬೆಳಗ್ಗೆ ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ಐದು ದಿನಗಳ ಕಾಲ ಜಾರಿಯಲ್ಲಿರುತ್ತದೆ.

ನಿಮಗೆಲ್ಲಾ ಸಂತೋಷದ ಸುದ್ದಿಯೇನೆಂದರೆ, ಇಂದು ಕ್ಯಾಶ್ ಕಾರ್ಡಿನ ಬಳಕೆಯನ್ನು ರೂಢಿ ಮಾಡಿಕೊಳ್ಳಲು, ವಸ್ತುಗಳ ಖರೀದಿಯನ್ನು ಹೊರತುಪಡಿಸಿ ಮಿಕ್ಕ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ಬಳಸಿಕೊಳ್ಳಬಹುದು. ಕಾರ್ಡಿನ ಬಳಕೆಯಲ್ಲಿ ತೊಂದರೆ ಕಾಣಿಸಿದರೆ, ತಕ್ಷಣ ಸಹಾಯಕ ಕೇಂದ್ರಗಳನ್ನು ಸಂಪರ್ಕಿಸಿರಿ. ಬರುವ ಶನಿವಾರ ಸಂಜೆ ಆಯ್ಕೆಯಾದ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗುವುದು. ಅಲ್ಲಿಯವರೆಗೆ ನಿಮ್ಮ ವಾಸ್ತವ್ಯ ಆನಂದಕರವಾಗಿರಲೆಂದು ಹಾರೈಸುತ್ತೇವೆ.

ಇಷ್ಟು ವಿವರಣೆ ಪಡೆದ ಅಭ್ಯರ್ಥಿಗಳು ತಮಗೆ ನಿಗದಿ ಪಡಿಸಿದ ಪ್ರತ್ಯೇಕ ರೂಮಿನತ್ತ ತೆರಳಿ ತಮ್ಮ ಲಗೇಜುಗಳನ್ನು ಜೋಡಿಸಿಟ್ಟುಕೊಂಡರು. ನಂತರ ತರಬೇತಿ ಕೇಂದ್ರದ ಕ್ಯಾಂಪಸ್ಸಿನ ತುಂಬಾ ಅಭ್ಯರ್ಥಿಗಳು ಹರಡಿಕೊಂಡರು. ಕೆಲವರು ವೈವಿಧ್ಯಮಯ ರುಚಿಕರ ತಿನಿಸುಗಳನ್ನು ಸವಿಯುವುದರಲ್ಲಿ ಮಗ್ನರಾದರೆ, ಹಲವರು ನೇರವಾಗಿ ಈಜುಕೊಳದ ಕಡೆ ಹೆಜ್ಜೆ ಹಾಕಿದರು. ಮತ್ತೆ ಕೆಲವರು ಮಾಲ್ ಗಳಲ್ಲಿ ವಸ್ತುಗಳ ಖರೀದಿಗೆ ಪ್ರಯತ್ನಿಸಿದರು. ಮೊದಲೇ ತಿಳಿಸಿದಂತೆ ಕ್ಯಾಶ್ ಕಾರ್ಡ್ ಅದಕ್ಕೆ ಆಸ್ಪದವೀಯಲಿಲ್ಲ. ಆಗ ಅವರು ಸಿನೆಮಾ ನೋಡಲು ತೆರಳಿದರು.

ಅಂತೂ ದಿನದ ಕೊನೆಯಲ್ಲಿ ಮಾನವ ಸಂಪನ್ಮೂಲ ವಿಭಾಗದವರು ದಣಿದು ಸುಸ್ತಾಗಿದ್ದರೂ ಸಂತೃಪ್ತತೆಯ ಭಾವದಲ್ಲಿದ್ದರು. ಅಂದು ಎಲ್ಲವೂ ಪೂರ್ವ ನಿಯೋಜಿತದಂತೆ ಕಾರ್ಯಗತವಾಗಿದ್ದವು. ಸಹಾಯಕ ಕೇಂದ್ರದಲ್ಲಿ ಬಂದಿದ್ದ ಒಂದೇ ಒಂದು ದೂರನ್ನು ಕೂಡ ತುರ್ತಾಗಿ ಪರಿಹರಿಸಿದ್ದರು. ಕ್ಯಾಶ್ ಕಾರ್ಡೊಂದು ತಿರುಚಿಕೊಂಡ ಕಾರಣ ಕೆಲಸ ಮಾಡುತ್ತಿರಲಿಲ್ಲ. ಅದನ್ನು ಕೂಡಲೇ ಬದಲಿಸಿಕೊಟ್ಟಿದ್ದರು. ಅಭ್ಯರ್ಥಿಗಳ ಕಾರ್ಡಿನ ಬಳಕೆಯ ಜಾಡನ್ನು ಹಿಡಿದು ಮಾಹಿತಿಯನ್ನು ಕಲೆಹಾಕಲು ವಿಶೇಷವಾದ ತಂತ್ರಾಂಶವನ್ನು ರೂಪಿಸಲಾಗಿತ್ತು. ಇದನ್ನು ದಕ್ಷತೆಯಿಂದ ನಿರ್ವಹಿಸುವಲ್ಲಿ ಮಾನವ ಸಂಪನ್ಮೂಲ ವಿಭಾಗದವರ ಮುಂದಿನ ಐದು ದಿನಗಳು ಪುರುಸೊತ್ತಿಲ್ಲದೆ ಕಳೆದುಹೋದವು.

ಅಭ್ಯರ್ಥಿಗಳಿಗಂತೂ ಆ ಐದು ದಿನಗಳು ಸ್ವರ್ಗದಲ್ಲಿದ್ದಂತೆ ಭಾಸವಾಯಿತು. ಅವರಿಗೆ ಅಲ್ಲಿ ಸಿಕ್ಕ ಆತಿಥ್ಯದಿಂದ ಉದ್ಯೋಗದ ಸಂದರ್ಶನಕ್ಕೆ ಬಂದಿದ್ದೇವೆ ಎಂಬ ಅಂಶವನ್ನು ಮರೆಸಿತ್ತು. ಕ್ಯಾಶ್ ಕಾರ್ಡನ್ನು ಶಾಪಿಂಗ್ ಮಾಲ್ ಗಳಲ್ಲಿ, ಈಜಾಟಕ್ಕೆ, ಆಹಾರ ಪಾನೀಯಗಳ ಸೇವನೆಗೆ, ಗೇಮ್ ಸ್ಟೇಷನ್ನಿನಲ್ಲಾಡಲು, ಬ್ಯೂಟಿ ಪಾರ್ಲರ್ ಹಾಗು ಲಾಂಡ್ರಿ ಸೇವೆಗೂ ಬಳಸುತ್ತಾ ಹಾಯಾಗಿದ್ದರು. ಕೆಲವರು ಇಲ್ಲಿ ದೊರಕಿದ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಂಡು ಸ್ವೇಚ್ಛೆಯಿಂದ ಕಾರ್ಡನ್ನು ಬಳಸಿದ್ದರಿಂದ ಮಧ್ಯಾಹ್ನದ ಊಟಕ್ಕೂ ಪರದಾಡಿದರು. ಸದಾ ಸಹಾಯ ಹಸ್ತ ಚಾಚುವಂತಹ ಗುಣವುಳ್ಳ ಕೆಲವರು ತಮ್ಮ ಕ್ಯಾಶ್ ಕಾರ್ಡಿನ ಮೂಲಕ ಇಂತಹವರ ಊಟ, ಔಷಧಿಗಳ ಖರ್ಚನ್ನು ವಹಿಸಿಕೊಂಡರು. ಕನಸಿನಂತೆ ಐದು ದಿನಗಳು ಕಳೆದುಹೋದವು.

ಶನಿವಾರ ಮುಂಜಾನೆ ಅಭ್ಯರ್ಥಿಗಳೆಲ್ಲರಲ್ಲೂ ಅಚ್ಚರಿ ಮನೆ ಮಾಡಿತ್ತು. ಉಳಿದೆಡೆಯಂತೆ ಸಂದರ್ಶನದ ಯಾವ ವಿಧಿಗಳೂ ಇರಲ್ಲಿಲ್ಲವಾಗಿ ಆಯ್ಕೆಯ ಮಾನದಂಡವೇನೆಂದು ತಿಳಿಯದಿದ್ದದ್ದು ಸಾಯಂಕಾಲ ಪ್ರಕಟಿಸಲಿರುವ ಪಟ್ಟಿಯ ನಿರೀಕ್ಷೆ ಮಾಡುವುದೊಂದೇ ಅವರಿಗುಳಿದಿದ್ದ ದಾರಿ.

ಇತ್ತ ಅಧ್ಯಕ್ಷರು ಇತರ ಪದಾಧಿಕಾರಿಗಳೊಡನೆ ಸಭೆ ಸೇರಿ ಮಾನವ ಸಂಪನ್ಮೂಲ ವಿಭಾಗದವರು ಸಲ್ಲಿಸಿದ್ದ ವರದಿಯನ್ನು ಪರಿಶೀಲಿಸುತ್ತಿದ್ದರು. ಆ ವರದಿಯಲ್ಲಿ ತಂತ್ರಾಂಶಕ್ಕೆ ಒದಗಿಸಿದ ಮಾನದಂಡದ ಪ್ರಕಾರ 62 ಅಭ್ಯರ್ಥಿಗಳು ಆಯ್ಕೆಯಾದ ವಿವರವಿತ್ತು.

ಪ್ರತಿ ಅಭ್ಯರ್ಥಿಗೆ ಐದು ದಿನಗಳ ಅವಧಿಗೆ ಸೌಲಭ್ಯಗಳನ್ನು ಬಳಸಲು ಒಟ್ಟು 12,000.00 ರೂಪಾಯಿಗಳನ್ನು ನೀಡಲಾಗಿತ್ತು. ಆ ಮೊತ್ತದಿಂದ ಗೇಮಿಂಗ್ ಸ್ಟೇಷನ್ನಿನ ಸೌಲಭ್ಯಕ್ಕೆ ಕನಿಷ್ಠ 3,600.00 ರೂಪಾಯಿಗಳನ್ನು ಹಾಗು ಕನಿಷ್ಠ 1,200.00 ರೂಪಾಯಿಗಳನ್ನು ತಲಾ 1) ಆಹಾರ ಮತ್ತು ಲಾಂಡ್ರಿ, 2) ಜಿಮ್, ಈಜುಕೊಳ ಮತ್ತಿತರ ಆಟೋಟಗಳು 3) ಪುಸ್ತಕಗಳ ಖರೀದಿಗೆ ಮತ್ತು 4) ಮಾಲ್, ಸಿನೆಮಾ ಮತ್ತು ಬ್ಯೂಟಿ ಪಾರ್ಲರ್ ಗಳಿಗೆ, ಹೀಗೆ ಕನಿಷ್ಠ 8,400.00 ರೂಪಾಯಿಗಳಷ್ಟು ಮೊತ್ತವನ್ನು ಖರ್ಚು ಮಾಡಿದ್ದವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಬಾಕಿ 3,600.00 ರೂಪಾಯಿಗಳ ಖರ್ಚಿನ ವಿಶ್ಲೇಷಣೆಯನ್ನು ಪರಿಗಣಿಸಿರಲಿಲ್ಲ. ಆಗ ಅಧ್ಯಕ್ಷರು 62 ಜನರಲ್ಲಿ ಎಷ್ಟು ಜನ ಬಾಕಿ 3,600.00 ರೂಪಾಯಿಗಳನ್ನು ಅನ್ಯರಿಗೆ ಆಹಾರ, ಔಷಧಿ ಕೊಳ್ಳಲು, ಗೇಮಿಂಗ್ ಸ್ಟೇಷನನ್ನು ಬಳಸಿಕೊಳ್ಳಲು ಉಪಯೋಗಿಸಿದ್ದರೆಂದು ತಿಳಿಸಬೇಕೆಂದರು. ಈ ಅಧಿಕ ಮಾನದಂಡವನ್ನು ಸಲ್ಲಿಸಿದೊಡನೆ, ಕಂಪ್ಯೂಟರಿನ ತಂತ್ರಾಂಶವು ಕೆಲವೇ ಕ್ಷಣದಲ್ಲಿ ವಿಶ್ಲೇಷಣೆ ಮಾಡಿ, 23 ಅಭ್ಯರ್ಥಿಗಳ ಹೊಸ ಪಟ್ಟಿಯನ್ನು ಸಿದ್ಧಪಡಿಸಿತು. ತಮ್ಮ ಹೊಸ ಯೋಜನೆ ಯಶಸ್ವಿಯಾದುದಕ್ಕೆ ಎಲ್ಲರನ್ನೂ ಅಭಿನಂದಿಸುತ್ತಾ, ಆ 23 ಅಭ್ಯರ್ಥಿಗಳ ಹೆಸರಿನ ಪಟ್ಟಿಯನ್ನು ಬಿಡುಗಡೆ ಮಾಡಲು ಸೂಚಿಸಿ, ಸಭೆಯನ್ನು ಮುಕ್ತಾಯಗೊಳಿಸಿದರು.

ಅಂದು ಸಂಜೆ ಆಯ್ಕೆಯಾದ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದಾಗ, ಎಲ್ಲರೂ ಅಚ್ಚರಿ ಹಾಗು ಗಲಿಬಿಲಿಗೊಳಗಾಗಿದ್ದರು.
ಇಷ್ಟು ಕಥೆಯನ್ನು ಹೇಳಿದ ಬಳಿಕ, ಇಯರ್ ಫೋನಿನಲ್ಲಿನ ಧ್ವನಿಯು ಮುಂದುವರೆಯುತ್ತಾ "ಸುಸ್ವಾಸ ನಾನು ಕೂಡ ಈ ಆಯ್ಕೆ ವಿಧಾನದಿಂದ ಗಲಿಬಿಲಿಗೊಂಡಿದ್ದೇನೆ. ಸುಸ್ವಾಸ ಈಗ ನೀನೇನಾದರೂ ತಿಳಿದೂ ಈ ವಿಧಾನದ ತರ್ಕವನ್ನು ಬಿಡಿಸಿ ತಿಳಿಸದಿದ್ದರೆ, ಸ್ಪೋಟಕಗಳಿಂದ ತುಂಬಿರುವ ಭಯೋತ್ಪಾದಕರ ಆತ್ಮಾಹುತಿ ಪಡೆಯವರ ಕಾರಿನಂತೆ ಸುಟ್ಟು ಬೂದಿಯಗುವುದು ಖಂಡಿತ!" ಎಂದು ಹೇಳುತ್ತಿದ್ದಂತೆ ನಿಶ್ಯಬ್ದ ಆವರಿಸಿತು.

ಸುಸ್ವಾಸನು ತನ್ನ ವಿವೇಚನಾ ಶಕ್ತಿಯಿಂದ ಕಥೆಯನ್ನು ಕೇಳುವಾಗಲೇ ಗ್ರಹಿಸಿದ್ದನ್ನು ಮನ ಬಿಚ್ಚಿ ಹೇಳತೊಡಗಿದ.

"ಇತ್ತೀಚಿನ ವಿದ್ಯಮಾನಗಳನ್ನು ಅವಲೋಕಿಸಿದಾಗ, ಪ್ರತಿಷ್ಠಿತ ಬ್ಯುಸಿನೆಸ್ ಸ್ಕೂಲ್ ಕ್ಯಾಂಪಸ್ಸಿನಿಂದ ಆಯ್ದ ನೂರಾರು ಉದ್ಯೋಗಿಗಳಿದ್ದರೂ, ಆರ್ಥಿಕ ಕ್ಷೇತ್ರದ ದಿಗ್ಗಜರೆನಿಸಿಕೊಂಡಂತಹ ಕಂಪನಿಗಳು ಏಕಾಏಕಿ ಮುಳುಗಿದ್ದು ಕಂಡುಬರುತ್ತದೆ. ಆದುದರಿಂದ ದಿಟವಾದ ನಾಯಕನನ್ನು ಗುರುತಿಸಲು ಶೈಕ್ಷಣಿಕ ಹಿನ್ನಲೆಯೊಂದೇ ಅಳತೆಗೋಲಾಗಲಾರದು. ಅದಲ್ಲದೆ ಹೆಚ್ಚಿನ ವ್ಯಾಸಂಗ ಮಾಡಿದ ವ್ಯಕ್ತಿಗೆ ಉದ್ಯೋಗಾರ್ಥಿಯ ಆಯ್ಕೆ ವಿಧಾನಗಳನ್ನು ಅಭ್ಯಸಿಸಿ ತಾನೇ ತಕ್ಕವನೆಂಬುವುದಾಗಿ ನಿರೂಪಿಸಿಕೊಳ್ಳುವುದು ಸುಲಭ ಸಾಧ್ಯ. ಬಾಬಾ ಕಂಪನಿಯ ಅಧ್ಯಕ್ಷರು ಹಾಗು ವ್ಯವಸ್ಥಾಪಕ ಮಂಡಳಿಯವರೆಗೆ ಇದರ ಅರಿವಿದ್ದುದರಿಂದ, ದಿಟವಾದ ನಾಯಕರನ್ನು ಪ್ರಾರಂಭಿಕ ಹಂತದಲ್ಲೇ ಗುರುತಿಸಲು ನವನವೀನ ಯೋಜನೆಯನ್ನು ರೂಪಿಸಿದರು.

ದಿಟವಾದ ನಾಯಕನು ತನ್ನ ವೃತ್ತಿ ಜೀವನ ಹಾಗು ವೈಯಕ್ತಿಕ ಜೀವನದ ನಡುವಿನ ಸಮತೋಲನವನ್ನು ಕಾಯ್ದುಕೊಳ್ಳುವತ್ತ ಜಾಗೃತನಾಗಿರುತ್ತಾನೆ. ತನಗೆ ದೊರೆಯುವ ಕನಿಷ್ಟತಮ ಸೌಲಭ್ಯ ಹಾಗು ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಪ್ರತಿಯೊಬ್ಬರ ಏಳ್ಗೆ ಹಾಗು ಪ್ರಗತಿಪರತೆಯನ್ನು ಮುನ್ನಡೆಸುತ್ತಾನೆ. ಅಷ್ಟಲ್ಲದೆ ದಿಟವಾದ ನಾಯಕನಿಗೆ ಒದಗಿ ಬರಲಿರುವ ತೊಂದರೆಗಳನ್ನು ಗುರುತಿಸಿ ಅದಕ್ಕೆ ಸೂಕ್ತ ಸಮಾಧಾನ ಕಂಡುಕೊಳ್ಳುವ ಕ್ಷಮತೆಯಿರುತ್ತದೆ

ಬಾಬಾ ಕಂಪನಿ ರೂಪಿಸಿದ ನವೀನ ವಿಧಾನದ ತತ್ತ್ವ ತುಂಬಾ ಸರಳವಾದುದು. ಅದು - ವೇಳೆಯನ್ನು - ಪ್ರತಿಯೊಬ್ಬರಿಗೂ ದೊರೆಯುವ ಅತ್ಯಮೂಲ್ಯ ಸಂಪನ್ಮೂಲವನ್ನು ಅಭ್ಯರ್ಥಿಗಳು ಬಳಸುವ ಬಗೆಯನ್ನು ವಿಶ್ಲೇಷಣೆ ಮಾಡುತ್ತದೆ. ಇದಕ್ಕಾಗಿ ಪ್ರತಿ ನೂರು ರೂಪಾಯಿ ಒಂದು ಘಂಟೆಗೆ ಸಮನೆಂದು, ಹಾಗಾಗಿ ಅಭ್ಯರ್ಥಿಗಳಿಗೆ ನೀಡಿದ 2,400.00 ರೂಪಾಯಿಗಳು ಒಂದು ದಿನಕ್ಕೆ ಸಮವೆಂದು ಪರಿಗಣಿಸಲ್ಪಟ್ಟಿತು. ದಿನದ 24 ಘಂಟೆಗಳಲ್ಲಿ ಉಳಿಸಿದ ಸಮಯವನ್ನು ಮರುದಿನ ಬಳಸಿಕೊಳ್ಳುವುದು ಅಸಾಧ್ಯವಾದುದರಿಂದ, ಕ್ಯಾಶ್ ಕಾರ್ಡ್ ದಿನಕ್ಕೆ ಗರಿಷ್ಠ 2,400.00 ರೂಪಾಯಿಗಳನ್ನು ಮಾತ್ರ ಖರ್ಚು ಮಾಡಲು ಅವಕಾಶ ಮಾಡಿಕೊಡುತ್ತಿತ್ತು. ಮತ್ತು ದಿನದ ಕೊನೆಯಲ್ಲಿ ಉಳಿದಿರಬಹುದಾದ ಮೊತ್ತವನ್ನು ಅನೂರ್ಜಿತಗೊಳಿಸುತ್ತಿತ್ತು.

ಹೊಸ ಆಯ್ಕೆ ವಿಧಾನದ ಮಾನದಂಡದ ಪ್ರಕಾರ ಕನಿಷ್ಠ 30% ಹಣವನ್ನು ಗೇಮಿಂಗ್ ಸ್ಟೇಷನ್ನಿನ ಬಳಕೆಗೆ, ಹಾಗು ತಲಾ 10% ಹಣವನ್ನು ಆಹಾರ, ಆಟೋಟ, ಪುಸ್ತಕ ಖರೀದಿಗೆ ಮತ್ತು ಮನೋರಂಜನೆಗೆ ಬಳಸಿದವರನ್ನು ಆರಿಸಲಾಗಿತ್ತು. ಅಂದರೆ ಮೊದಲಿಗೆ ಆಯ್ದ 62 ಜನರು ನ್ಯುನತಮ 30% - 40% ರಷ್ಟು ಸಮಯವನ್ನು ವೃತ್ತಿ ಜೀವನಕ್ಕೂ, ಸುಮಾರು 30% - 40% ಸಮಯವನ್ನು ವೈಯಕ್ತಿಕ ಜೀವನದ ನಿರ್ವಹಣೆಗೂ ಅವಿರತವಾಗಿ ಬಳಸಿಕೊಳ್ಳುವ ಕಾರ್ಯಕ್ಷಮತೆ ಹೊಂದಿರುವವರು ಎಂದಾಗುತ್ತದೆ. ಅಧ್ಯಕ್ಷರು ಸೂಚಿಸಿದ ಮತ್ತೊಂದು ಮಾನದಂಡದ ಪ್ರಕಾರ ಇವರ ಪೈಕಿ ಯಾರೆಲ್ಲ ತಮ್ಮ ಬಾಕಿ 20% - 30% ಹಣವನ್ನು ಅನ್ಯರ ಅದರಲ್ಲೂ ಬೇಕಾಬಿಟ್ಟಿಯಿಂದ ಕ್ಯಾಶ್ ಕಾರ್ಡನ್ನು ಖಾಲಿ ಮಾಡಿಕೊಂಡಿದ್ದವರ ಆಹಾರ, ಔಷಧಿ ಮತ್ತು ಗೇಮಿಂಗ್ ಸ್ಟೇಷನ್ನಿನ ಬಳಕೆಗಾಗಿ ಉಪಯೋಗಿಸಿದ್ದರೋ, ಅಂತಹ 23 ಜನರನ್ನು ಆರಿಸಲಾಯಿತು. ಏಕೆಂದರೆ ಇವರಲ್ಲಿ ವೈಯಕ್ತಿಕ ಹಾಗು ವೃತ್ತಿ ಜೀವನದ ಸಮತೋಲನ ಕಾಪಾಡಿಕೊಳ್ಳುವ, ತಮ್ಮ ಮತ್ತು ತಮ್ಮ ಸುತ್ತಲಿನ ಜನರ ಬಗ್ಗೆ ಕಾಳಜಿ ಹಾಗು ವೇಳೆಯನ್ನು ಮೀಸಲಿಡುವ ಕ್ಷಮತೆಯಿದೆ. ಇದೇ ದಿಟವಾದ ನಾಯಕರಲ್ಲಿ ವ್ಯಕ್ತವಾಗುವ ಗುಣಗಳು."

ಇಷ್ಟನ್ನು ಸುಸ್ವಾಸ ಹೇಳಿ ಮುಗಿಸುತ್ತಿದ್ದಂತೆ, ಜೋರಾಗಿ ಗಹಗಹಿಸುತ್ತಾ ನಗುವ ಸದ್ದು ಕಪ್ಪು ಟೆಲಿಫೋನಿನಿಂದ ಹೊರಟಿತು. ಅದರ ಹಿಂದೆಯೇ ಗಡಸಾದ ಧ್ವನಿಯು "ಸುಸ್ವಾಸ ನೀನು ಮನೆ ತಲಪುವ ಮುನ್ನವೇ ಮಾತನಾಡಿ ನನ್ನ ಕಟ್ಟಳೆಯನ್ನು ಮುರಿದಿದ್ದಿ. ನನ್ನನ್ನು ಪುನಃ ಕಾಣಬೇಕಾದರೆ ನಾಳೆ ಸೂರ್ಯೋದಯವಾದ ನಂತರವೇ" ಎಂದು ಹೇಳುತ್ತಾ ಮಾಯವಾಯಿತು.
________________________________________________________________________________

ಶನಿವಾರ, ಅಕ್ಟೋಬರ್ 11, 2008

ಗಾಂಧಿ ತಾತ

ಗಾಂಧಿ ತಾತ
ಆಗಿದ್ದರೂ ನಮ್ಮ ನಿಮ್ಮಂತೆ ಸಾಮಾನ್ಯನೀತ
ತೊಡಗಿ ಸತ್ಯ ಶೋಧನೆಯಲ್ಲಿ ಅವಿರತ
ಭೋಧಿಸಿದ ಸತ್ಯ ಅಹಿಂಸೆಗಳನೀತ
ಬಿತ್ತಿದ ಶಾಂತಿಯುತ ಸತ್ಯಾಗ್ರಹದ ಮಂತ್ರ
ನೆಲೆಸಿರುವನು ನಮ್ಮೆಲ್ಲರ ಮನದಲಿ ಆಗಿ ರಾಷ್ಟ್ರಪಿತ.
__________________________________________________________