ಮಂಗಳವಾರ, ಅಕ್ಟೋಬರ್ 1, 2013

ಕೃಷ್ಣ - ಲಾಲು ವಿರೋಧಾಭಾಸ

ಕೃಷ್ಣನೆಂಬ ಗೊಲ್ಲ 
ಜನಿಸಿದರೂ  ಕಾರಾಗೃಹದಲ್ಲಿ 
ಉದ್ಧರಿಸಿದ ಜಗವನ್ನೆಲ್ಲಾ.
ಲಾಲು ಎಂಬ ಗೊಲ್ಲ 
ನಿರ್ದೇಶಿಸಿದ ಮೇವಿನ ಹಗರಣವನ್ನೆಲ್ಲಾ 
ಕಡೆಗೂ ಕಾರಾಗೃಹದಲ್ಲಿ ಬಂಧಿಯಾದನಲ್ಲ.

ಸೋಮವಾರ, ಏಪ್ರಿಲ್ 11, 2011

ಸೂರ್ಯಾಸ್ತ

ಆ ಹೊಂಬಣ್ಣದ ಸುಂದರವಾದ ಸೂರ್ಯ
ದಿಗಂತದಲ್ಲಿ ಇಳಿಯಲು ತಯಾರಾಗುತ್ತಿತ್ತು
ಬಾನೆತ್ತರೆದ ಹಸಿರು ಮರಗಳ ಮರೆಯಿಂದ
ರಂಗು ರಂಗಿನ ಚಿತ್ತಾರದ ಪ್ರಯೋಗ ನಡೆದಿತ್ತು
ಹತ್ತಿರದ ಮೋಡ ಹಾಗು ದೂರದ ಬಾನಂಚಿನಲ್ಲಿ

ಆ ಮಹಾನ್ ದೈವೀಕ ಕಲೆಯು ಸೆರೆಯಾಗಿತ್ತು
ನೋಡುತ್ತಿರುವ ಪುಟ್ಟ ಅಕ್ಷಿಪಟಲಗಳಲ್ಲಿ

ಕೊನೆಗೂ ಸೂರ್ಯನು ದಿಗಂತದಲ್ಲಿ ಮರೆಯಾದಾಗ
ಆ ಕಾರ್ಮೋಡಗಳೂ ಹೊಳೆಯುತ್ತಿದ್ದವು ಬೆಳ್ಳಿಯಂಚಿನಿಂದ
ನೀಡಲೆಂದು ನಮಗೆಲ್ಲಾ  ಹೊನ್ನಿನಂತಹ ಸಂದೇಶ

ನುಸುಳುತ್ತಿರುವ ಗಾಢ ಅಂಧಕಾರದ ನಂತರವೂ
ಮೂಡುತ್ತದೆ ಬೆಳ್ಳನೆ ಬೆಳಗುವ ಸೂರ್ಯನ ಪ್ರಕಾಶ.
_____________________________________________________________________________

ಗುರುವಾರ, ಏಪ್ರಿಲ್ 2, 2009

ರುಚಿ

ಉಪ್ಪು ಪುಡಿ ಮೆಣಸು
ಚಿಟಿಕೆ ಅಳತೆಯಲ್ಲಿ
ಉಪಯೋಗಿಸಿದರೆ ಬಲು ಸೊಗಸು
ಒಗರು ಮಾವಿನಕಾಯಿಯೂ
ಆಗುತ್ತದೆ ರುಚಿಕರ ತಿನಿಸು.
____________________________________________________________________________

ಸೋಮವಾರ, ಮಾರ್ಚ್ 30, 2009

ಸಮಯ

ಇದರ ಚಲನೆ ಯಾವಾಗಲೂ ಪೂರ್ವ ನಿರ್ಧಾರಿತ ದರದೊಳು
ಟಿಕ್ ಟಿಕ್ ಟಿಕ್ ಟಿಕ್ ಎಂದು ಚಲಿಸುತ್ತಿರುತ್ತದೆ ಭವಿಷ್ಯದೊಳು
ಒಮ್ಮೆ ಚಲಿಸಿತೆಂದರೆ ಸೇರಿ ಹೋಗುವುದು ಕಾಲ ಗರ್ಭದೊಳು
ಪ್ರತಿ ಕೆಲಸದಲ್ಲೂ ಕಾಲ ಮಿಂಚಿ ಹೋಗುತ್ತಿರುತ್ತದೆಂದು ತೋಡಿಕೊಳ್ಳದಿರಿ ನಿಮ್ಮ ಅಳಲು
ಏಕೆಂದರೆ ಇದೊಂದರಲ್ಲೇ ಸಿಗುವುದು ಎಲ್ಲರಿಗೂ ಸಮಪಾಲು
ದಿನಕ್ಕೆ ಇಪ್ಪತ್ನಾಲ್ಕು ಘಂಟೆ ಪ್ರತಿಯೊಬ್ಬರ ದಿನದೊಳು
ಹುಟ್ಟುತ್ತಲೇ ಎಲ್ಲರಿಗೂ ದೊರೆಯುವುದು 5 ಲಕ್ಷಕ್ಕೂ ಮೀರಿ ಘಂಟೆಗಳು
ಇದನ್ನು ಬಳಸುವ ಕಲೆಯೇ ರೂಪಿಸುವುದು ನಮ್ಮೆಲ್ಲರ ಬಾಳು.
_____________________________________________________________________

ಮಂಗಳವಾರ, ಫೆಬ್ರವರಿ 3, 2009

ಸುಧಾರಣೆ?!

ಚಾಕು ಚೂರಿಯ ಸಂಸ್ಕೃತಿ ಹೋಗಿ
ಎಡೆ ಮಾಡಿಕೊಟ್ಟಿದೆ ರೈಫಲ್ ಗ್ರೆನೇಡ್
ಬಳಸುವ ಭಯೋತ್ಪಾದಕರ ಗ್ಯಾಂಗಿಗೆ
ಬಂಗಾರದ ಕಳ್ಳಸಾಗಾಣಿಕೆ ಕಡಿಮೆಯಾಗಿದೆ
ಆಫೀಮು ಗಾಂಜಾದಂತಹ ಮಾದಕ ವಸ್ತುಗಳ ಜಾಲ ಹರಡಿದೆ
ಪ್ಲೇಗು ಪೋಲಿಯೋ ಸಿಡಿಬುಗಳ ಹುಟ್ಟಡಗಿವೆ
ಕ್ಯಾನ್ಸರ್ ಅಲ್ಸರ್ ಎಡ್ಸಗಳು ಭುಸುಗುಡುತ್ತಿವೆ
ಶಾಂತಿ ಸಹನೆ ಸಹ ಬಾಳ್ವೆಯ ಯುಗ ಮುಗಿದಿದೆ
ಎಲ್ಲೆಲ್ಲೂ ಆಂತರಿಕ ಕಲಹ ಕಾಣುತ್ತಿದೆ
ಇದಕ್ಕೆಲ್ಲಾ ಕಾಣುವುದೆಂತು ಕೊನೆ?
ಅವತರಿಸಬೇಕೆ ಮತ್ತೊಮ್ಮೆ ಆ ಭಗವಂತನೇ?
___________________________________________________________________________________

ಬುಧವಾರ, ಜನವರಿ 28, 2009

ಉತ್ಸಾಹದ ಚಿಲುಮೆ

Be a fountain of joy. Then life will be manifested as a beautiful rainbow!


ಉತ್ಸಾಹದ ಚಿಲುಮೆಯಾಗಿರಿ. ಆಗ ಜೀವನವು ಕಾಮನಬಿಲ್ಲಿನಂತೆ ಸುಂದರ.
_______________________________________________________

ಭಾನುವಾರ, ಜನವರಿ 18, 2009

ಇನ್ನೊಂದು ಗಡಿಯಾರ

ಕೈ ಗಡಿಯಾರವಿಲ್ಲದೆ ಪೂರ್ಣತೆ ಹೊಂದದು ಉಡುಗೆ
ವಿವಿಧ ಸಂದರ್ಭಗಳಲ್ಲಿ ನೀಡಲು ಆಗಿದೆ ಸೂಕ್ತ ಕೊಡುಗೆ
20 ರೂಪಾಯಿಗಳಿಂದ 20 ಲಕ್ಷಗಳವರೆಗೆ ಬೇಕು ಇದರ ಖರೀದಿಗೆ
ಮರುಳಾಗಿದ್ದೇವೆ,
ಇದೇ ಜೀವನ ಮೌಲ್ಯದ ಸೂಚ್ಯಾಂಕವೆನ್ನುವ ಜಾಹಿರಾತಿಗೆ
ಆದರೆ ಮೌಲ್ಯ ಕಟ್ಟಲಾಗುವುದೆ ಕೈ ಗಡಿಯಾರ ತೋರಿಸುವ ವೇಳೆಗೆ?
____________________________________________________________________________________________________________________